ನೆಬೂಕದ್ನೆಚರನ ಆಸ್ಥಾನದಲ್ಲಿ ಇಬ್ರಿಯ ಯುವಕರು
1 ಯೆಹೂದದ ಅರಸನಾದ ಯೆಹೋಯಾಕೀಮನ ಆಳ್ವಿಕೆಯ ಮೂರನೆಯ ವರ್ಷದಲ್ಲಿ ಬಾಬೆಲಿನ ರಾಜನಾದ ನೆಬೂಕದ್ನೆಚ್ಚರನು ಯೆರೂಸಲೇಮಿಗೆ ಬಂದು ಮುತ್ತಿಗೆ ಹಾಕಿದನು. 2 ಆಗ ಕರ್ತನು ಯೆಹೂದದ ಅರಸನಾದ ಯೆಹೋಯಾಕೀಮನನ್ನೂ, ದೇವಾಲಯದ ಅನೇಕ ಪಾತ್ರೆಗಳನ್ನೂ ಅವನ ವಶಕ್ಕೆ ಕೊಡಲು ಅವನು ಅವುಗಳನ್ನು ಶಿನಾರ್ ದೇಶಕ್ಕೆ ಸಾಗಿಸಿ ತನ್ನ ದೇವರ ಮಂದಿರಕ್ಕೆ ತಂದು ಆ ದೇವರ ಭಂಡಾರದಲ್ಲಿ ಸೇರಿಸಿಬಿಟ್ಟನು.
3 ಅನಂತರ ಆ ರಾಜನು ತನ್ನ ಕಂಚುಕಿಯರಲ್ಲಿ ಮುಖ್ಯಸ್ಥನಾದ ಅಶ್ಪೆನಜನಿಗೆ, "ನೀನು ಇಸ್ರಾಯೇಲರಲ್ಲಿ ಅಂದರೆ ರಾಜವಂಶೀಯರಲ್ಲಿ 4 ಮತ್ತು ಪ್ರಧಾನರಲ್ಲಿ ಅಂಗದೋಷವಿಲ್ಲದವರೂ, ಸುಂದರರೂ, ಸಮಸ್ತ ಶಾಸ್ತ್ರಜ್ಞರೂ, ಪಂಡಿತರೂ, ವಿದ್ಯಾನಿಪುಣರೂ, ರಾಜಾಲಯದಲ್ಲಿ ಸನ್ನಿಧಿ ಸೇವೆಮಾಡಲು ಸಮರ್ಥರೂ ಆದ ಕೆಲವು ಯುವಕರನ್ನು ಇಲ್ಲಿಗೆ ಕರೆದುತಂದು ಅವರಿಗೆ ಕಸ್ದೀಯ ಪಂಡಿತರ ಭಾಷೆಯನ್ನೂ, ಶಾಸ್ತ್ರಗಳನ್ನೂ ಕಲಿಸಬೇಕು" ಎಂಬುದಾಗಿ ಅಪ್ಪಣೆಕೊಟ್ಟನು. 5 ಇದಲ್ಲದೆ, "ಇನ್ನು ಮುಂದೆ ಅವರು ಸನ್ನಿಧಿಸೇವಕರಾಗಲೆಂದು ತನ್ನ ಭೋಜನ ಪದಾರ್ಥಗಳನ್ನೂ, ರಾಜನು ಕುಡಿಯುವ ದ್ರಾಕ್ಷಾರಸವನ್ನೂ ಅವರಿಗೆ ಪ್ರತಿದಿನ ಬಡಿಸುವ ಏರ್ಪಾಡುಮಾಡಿ ಅವರನ್ನು ಮೂರು ವರ್ಷ ಪೋಷಿಸಬೇಕು" ಎಂದು ಆಜ್ಞಾಪಿಸಿದನು.
6 ಆರಿಸಲ್ಪಟ್ಟ ಯುವಕರಲ್ಲಿ ದಾನಿಯೇಲ, ಹನನ್ಯ, ಮೀಶಾಯೇಲ, ಅಜರ್ಯ ಎಂಬ ಯೆಹೂದ್ಯರು ಸೇರಿದ್ದರು.