12 ಆಗ ಎಲ್ಲಾ ಯೆಹೂದ್ಯರು ತಮ್ಮ ತಮ್ಮ ಧಾನ್ಯ, ದ್ರಾಕ್ಷಾರಸ, ಎಣ್ಣೆ ಇವುಗಳಲ್ಲಿ ದಶಮಾಂಶವನ್ನು ತಂದು ಭಂಡಾರಗಳಲ್ಲಿ ಹಾಕಿದರು. 13 ನಂತರ ಉಗ್ರಾಣಗಳ ಮೇಲ್ವಿಚಾರಣೆಗಾಗಿ ನೋಡುವುದಕ್ಕೋಸ್ಕರ ಯಾಜಕನಾದ ಶೆಲೆಮ್ಯ, ಲೇಖಕನಾದ ಚಾದೋಕ್, ಲೇವಿಯ ಕುಲದವನಾದ ಪೆದಾಯ ಇವರನ್ನೂ, ಇವರ ಸಹಾಯಕ್ಕಾಗಿ ಜಕ್ಕೂರನ ಮಗನೂ, ಮತ್ತನ್ಯನ ಮೊಮ್ಮಗನೂ ಆದ ಹಾನಾನನನ್ನೂ ನೇಮಿಸಿದೆನು. ಇವರೆಲ್ಲರೂ ನಂಬಿಗಸ್ತರೆಂದು ಹೆಸರುಗೊಂಡವರಾಗಿದ್ದರು. ತಮ್ಮ ಸಹೋದರರಿಗೆ ಸಿಕ್ಕತಕ್ಕದ್ದನ್ನು ಹಂಚಿಕೊಡುವುದು ಇವರ ಕರ್ತವ್ಯವಾಗಿತ್ತು. 14 ನನ್ನ ದೇವರೇ, ಇದನ್ನು ನನ್ನ ಹಿತಕ್ಕಾಗಿ ನೆನಪುಮಾಡಿಕೋ. ನಾನು ನನ್ನ ದೇವರ ಆಲಯದ ಮತ್ತು ಅದರ ಸೇವೆಯ ಸಂಬಂಧವಾಗಿ ಮಾಡಿದ ಭಕ್ತಿಕಾರ್ಯಗಳನ್ನು ನಿನ್ನ ಪುಸ್ತಕದಿಂದ ಆಳಿಸಿಬಿಡಬೇಡ.