14 ಅರಸನಾದ ಅರ್ತಷಸ್ತನು ನನ್ನನ್ನು ಯೆಹೂದ ದೇಶದ ಅಧಿಪತಿಯನ್ನಾಗಿ ನೇಮಿಸಿದಂದಿನಿಂದ ಹನ್ನೆರಡು ವರ್ಷಗಳ ವರೆಗೆ ಅಂದರೆ ಅವನ ಆಳ್ವಿಕೆಯ ಇಪ್ಪತ್ತನೆಯ ವರ್ಷದಿಂದ ಮೂವತ್ತೆರಡನೆಯ ವರ್ಷದವರೆಗೆ ನಾನಾಗಲಿ ನನ್ನ ಸಹೋದರರಾಗಲಿ ದೇಶಾಧಿಪತಿಗೆ ಸಲ್ಲತಕ್ಕ ಭತ್ಯದಿಂದ ಜೀವನಮಾಡಲಿಲ್ಲ. 15 ನನಗಿಂತ ಮೊದಲಿದ್ದ ದೇಶಾಧಿಪತಿಗಳು ಜನರ ಮೇಲೆ ಬಹಳ ಭಾರಹಾಕಿ ಅವರಿಂದ ದಿನಕ್ಕೆ ನಲ್ವತ್ತು ರೂಪಾಯಿಯ ಆಹಾರವನ್ನೂ, ದ್ರಾಕ್ಷಾರಸವನ್ನೂ ತೆಗೆದುಕೊಂಡದ್ದಲ್ಲದೆ ಅವರ ಸೇವಕರೂ ಜನರ ಮೇಲೆ ದೊರೆತನ ನಡೆಸಿದರು. ನಾನಾದರೋ ದೇವರಲ್ಲಿ ಭಯಭಕ್ತಿಯುಳ್ಳವನಾಗಿ ಇರುವುದರಿಂದ ಹಾಗೆ ಮಾಡದೆ ಆ ಪೌಳಿಗೋಡೆ ಕಟ್ಟುವುದರಲ್ಲಿ ನಿರತನಾಗಿದ್ದೆನು. 16 ಮತ್ತು ನನ್ನ ಎಲ್ಲಾ ಸೇವಕರೂ ಪ್ರತಿದಿನ ಆ ಕೆಲಸಕ್ಕೆ ಬರುವಂತೆ ನೋಡುತ್ತಿದ್ದೆನು. ನಾವು ಅಲ್ಲಿ ಭೂಮಿಯನ್ನು ಸಂಪಾದಿಸಿಕೊಂಡಿರಲಿಲ್ಲ. 17 ಇದಲ್ಲದೆ ಯೆಹೂದ್ಯರಲ್ಲಿ ನೂರೈವತ್ತು ಮಂದಿ ಅಧಿಕಾರಿಗಳೂ ಸುತ್ತಣ ಜನಾಂಗಗಳ ಮಧ್ಯದಿಂದ ನಮ್ಮ ಬಳಿಗೆ ಬರುತ್ತಿದ್ದವರೂ ನನ್ನ ಪಂಕ್ತಿಯಲ್ಲಿ ಊಟಮಾಡುತ್ತಿದ್ದರು. 18 ಪ್ರತಿದಿನ ಒಂದು ಹೋರಿ, ಆರು ಕೊಬ್ಬಿದ ಕುರಿ, ಕೆಲವು ಪಕ್ಷಿಗಳು ನಮ್ಮ ಭೋಜನಕ್ಕಾಗಿ ಸಿದ್ಧವಾಗುತ್ತಿದ್ದವು. ಹತ್ತು ದಿನಕ್ಕೊಮ್ಮೆ ನಾನು ಎಲ್ಲಾ ಬಗೆಯ ದ್ರಾಕ್ಷಾರಸವನ್ನು ಬೇಕಾದಷ್ಟು ಒದಗಿಸಲು ವ್ಯವಸ್ಥೆಮಾಡಿದೆ. ಇಷ್ಟೆಲ್ಲಾ ಇದ್ದರೂ ಆ ಜನರು ಮಾಡುತ್ತಿದ್ದ ಕೆಲಸವು ಬಹು ಕಠಿಣವಾಗಿದ್ದದರಿಂದ ನಾನು ದೇಶಾಧಿಪತಿಗೆ ಸಲ್ಲತಕ್ಕ ಭತ್ಯವನ್ನು ಕೇಳಲೇ ಇಲ್ಲ. 19 ನನ್ನ ದೇವರೇ, ನಾನು ಆ ಜನರಿಗೋಸ್ಕರ ಮಾಡಿದ್ದೆಲ್ಲವನ್ನು ನೆನಪು ಮಾಡಿಕೊಂಡು ನನಗೆ ಒಳಿತನ್ನು ಅನುಗ್ರಹಿಸು ಎಂದು ಪ್ರಾರ್ಥಿಸಿದೆ.