11 ಕರ್ತನ ಭಯಭಕ್ತಿಯನ್ನು ಅರಿತಿರುವ ಕಾರಣ, ಜನರ ಮನವೊಲಿಸಲು ನಾವು ಪ್ರಯತ್ನಿಸುತ್ತೇವೆ. ನಾವು ಎಂಥವರೆಂದು ದೇವರು ಚೆನ್ನಾಗಿ ಬಲ್ಲವರಾಗಿದ್ದಾರೆ. ಅದು ನಿಮ್ಮ ಮನಸ್ಸಾಕ್ಷಿಗೂ ತಿಳಿದಿದೆ ಎಂದು ನಾನು ನಂಬುತ್ತೇನೆ. 12 ಮತ್ತೊಮ್ಮೆ ನಮ್ಮನ್ನು ನಾವೇ ಹೊಗಳಿಕೊಳ್ಳುತ್ತೇವೆಂದು ನೀವು ಭಾವಿಸಬೇಡಿ. ನಮ್ಮನ್ನು ಕುರಿತು ನೀವು ಹೆಮ್ಮೆ ಪಡುವಂತೆ ಒಂದು ಅವಕಾಶವನ್ನು ನಾವು ನಿಮಗೆ ಒದಗಿಸುತ್ತೇವೆ ಅಷ್ಟೇ. ಹೀಗೆ ಮನುಷ್ಯರ ಹೃದಯವನ್ನಲ್ಲಾ, ಹೊರತೋರಿಕೆಯನ್ನು ಕಂಡು ಹೆಮ್ಮೆ ಪಡುವವರಿಗೆ ನೀವು ಉತ್ತರ ಕೊಡುವಿರಿ. 13 ನಮಗೆ ಬುದ್ಧಿ ಭ್ರಮಣೆಯಾಗಿದ್ದರೆ, ಅದು ದೇವರಿಗಾಗಿಯೇ. ನಾವು ಸ್ವಸ್ಥಬುದ್ಧಿಯುಳ್ಳವರಾಗಿದ್ದರೆ, ಅದು ನಿಮಗಾಗಿಯೇ. 14 ಕ್ರಿಸ್ತ ಯೇಸುವಿನ ಪ್ರೀತಿಯು ನಮ್ಮನ್ನು ಒತ್ತಾಯಪಡಿಸುತ್ತದೆ. ಏಕೆಂದರೆ, ಎಲ್ಲರಿಗೋಸ್ಕರ ಕ್ರಿಸ್ತ ಯೇಸು ಸತ್ತದ್ದರಿಂದ, ಎಲ್ಲರೂ ಸತ್ತಂತಾಯಿತು. 15 ಜೀವಿಸುವವರು ಇನ್ನು ಮೇಲೆ ತಮಗಾಗಿ ಜೀವಿಸದೆ, ತಮಗಾಗಿ ಸತ್ತು ಪುನರುತ್ಥಾನವಾಗಿ ಬಂದ ಕ್ರಿಸ್ತ ಯೇಸುವಿಗೋಸ್ಕರವೇ ಜೀವಿಸಬೇಕೆಂದು ಕ್ರಿಸ್ತ ಯೇಸು ಎಲ್ಲರಿಗೋಸ್ಕರ ಸತ್ತರು.
16 ಇನ್ನು ಮೇಲೆ ನಾವು ಯಾರನ್ನೂ ಶರೀರ ಸಂಬಂಧವಾಗಿ ಅರಿತುಕೊಳ್ಳುವುದಿಲ್ಲ. ಒಂದು ಕಾಲದಲ್ಲಿ ಕ್ರಿಸ್ತ ಯೇಸುವನ್ನು ನಾವು ಶರೀರ ಸಂಬಂಧವಾಗಿ ಅರಿತಿದ್ದೆವು. ಆದರೆ ಇನ್ನು ಮುಂದೆ ಕ್ರಿಸ್ತ ಯೇಸುವನ್ನು ಶರೀರ ಸಂಬಂಧವಾಗಿ ನಾವು ಅರಿತುಕೊಳ್ಳುವುದಿಲ್ಲ. 17 ಆದ್ದರಿಂದ ಯಾರಾದರೂ ಕ್ರಿಸ್ತ ಯೇಸುವಿನಲ್ಲಿದ್ದರೆ, ಅವರು ನೂತನ ಸೃಷ್ಟಿಯಾಗಿದ್ದಾರೆ: ಹಳೆಯದೆಲ್ಲವೂ ಹೋಗಿ ಅವರಿಗೆ ಹೊಸ ಸೃಷ್ಟಿಯು ಬರುವುದು. 18 ಇವೆಲ್ಲವೂ ದೇವರಿಂದಲೇ ಆಯಿತು. ನಮ್ಮನ್ನು ಕ್ರಿಸ್ತ ಯೇಸುವಿನ ಮೂಲಕ ತಮ್ಮೊಂದಿಗೆ ಸಮಾಧಾನ ಮಾಡಿಕೊಂಡ ದೇವರು, ಇತರರನ್ನು ಸಮಾಧಾನಕ್ಕೆ ತರುವ ಸೇವೆಯನ್ನೂ ನಮಗೆ ಕೊಟ್ಟಿರುತ್ತಾರೆ: 19 ಹೇಗೆಂದರೆ, ದೇವರು ಮನುಷ್ಯರ ಪಾಪಗಳನ್ನು ಅವರಿಗೆ ವಿರೋಧವಾಗಿ ಲೆಕ್ಕಿಸದೆ, ಕ್ರಿಸ್ತ ಯೇಸುವಿನಲ್ಲಿ ಇಡೀ ಜಗತ್ತನ್ನೇ ತಮ್ಮೊಂದಿಗೆ ಸಮಾಧಾನಪಡಿಸುತ್ತಿದ್ದಾರೆ. ಈ ಸಮಾಧಾನದ ಸಂದೇಶವನ್ನೇ ದೇವರು ನಮಗೊಪ್ಪಿಸಿ ಕೊಟ್ಟಿದ್ದಾರೆ. 20 ಆದ್ದರಿಂದ ನಾವು ಕ್ರಿಸ್ತ ಯೇಸುವಿನ ರಾಯಭಾರಿಗಳಾಗಿದ್ದೇವೆ. ದೇವರೇ ನಮ್ಮ ಮೂಲಕ ನಿಮಗೆ ಕರೆ ನೀಡುತ್ತಾರೆ. ಆದ್ದರಿಂದ ಕ್ರಿಸ್ತ ಯೇಸುವಿನ ಪರವಾಗಿ ನಿಮ್ಮನ್ನು ಬೇಡಿಕೊಳ್ಳುವುದೇನೆಂದರೆ: ದೇವರೊಡನೆ ಸಮಾಧಾನ ಮಾಡಿಕೊಳ್ಳಿರಿ. 21 ಪಾಪವನ್ನೇ ಅರಿಯದ ಕ್ರಿಸ್ತ ಯೇಸುವನ್ನು ದೇವರು ನಮಗೋಸ್ಕರ ಪಾಪವನ್ನಾಗಿ ಮಾಡಿದರು. ಹೀಗೆ ಕ್ರಿಸ್ತ ಯೇಸುವಿನಲ್ಲಿ ದೇವರ ನೀತಿಯನ್ನಾಗಿ ದೇವರು ನಮ್ಮನ್ನು ಮಾಡಿದರು.