17 ಮೋಶೆಯ ಮಾವನು ಅವನಿಗೆ, "ನೀನು ಮಾಡುವ ಕಾರ್ಯವಿಧಾನ ಸರಿಯಲ್ಲ, 18 ನೀನೂ, ನಿನ್ನ ಸಂಗಡ ಇರುವ ಜನರೂ ಖಂಡಿತ ಬಳಲುವಿರಿ. ಏಕೆಂದರೆ ಇದು ನಿನಗೆ ಬಹು ಭಾರ. ನೀನೊಬ್ಬನೇ ಇದನ್ನು ಮಾಡಲಾರೆ. 19 ಆದ್ದರಿಂದ ಈಗ ನನ್ನ ಮಾತನ್ನು ಕೇಳು, ನಿನಗೆ ಆಲೋಚನೆ ಹೇಳುತ್ತೇನೆ. ದೇವರು ನಿನ್ನ ಸಂಗಡ ಇರಲಿ. ನೀನು ಜನರಿಗಾಗಿ ದೇವರ ಪಕ್ಷದಲ್ಲಿದ್ದು, ಅವರ ವ್ಯಾಜ್ಯಗಳನ್ನು ದೇವರ ಮುಂದೆ ತರಬೇಕು. 20 ನಿಯಮಗಳನ್ನೂ, ಆಜ್ಞೆಗಳನ್ನೂ ಅವರಿಗೆ ಕಲಿಸಿ, ಅವರು ನಡೆಯಬೇಕಾದ ಮಾರ್ಗವನ್ನೂ, ಅವರು ಮಾಡಬೇಕಾದ ಕೆಲಸವನ್ನೂ ಅವರಿಗೆ ತೋರಿಸಬೇಕು. 21 ಇದಲ್ಲದೆ ನೀನು ಸಮಸ್ತ ಜನರೊಳಗೆ ಸಮರ್ಥರು ಅಂದರೆ ದೇವರಿಗೆ ಭಯಪಡುವವರೂ, ಸತ್ಯವಂತರೂ, ದುರಾಶೆಯನ್ನು ಹಗೆಮಾಡುವವರೂ ಆಗಿರುವವರನ್ನು ಸಾವಿರ ಮಂದಿಯ ಮೇಲೆಯೂ, ನೂರು ಮಂದಿಯ ಮೇಲೆಯೂ, ಐವತ್ತು ಮಂದಿಯ ಮೇಲೆಯೂ, ಹತ್ತು ಮಂದಿಯ ಮೇಲೆಯೂ ಅಧಿಕಾರಿಗಳನ್ನಾಗಿ ನೇಮಿಸು. 22 ಇವರು ಎಲ್ಲಾ ಕಾಲಗಳಲ್ಲಿಯೂ ಜನರಿಗೆ ನ್ಯಾಯತೀರಿಸಲಿ. ಆದರೆ ದೊಡ್ಡ ವ್ಯಾಜ್ಯಗಳನ್ನೆಲ್ಲಾ ನಿನ್ನ ಮುಂದೆ ತಂದು, ಸಣ್ಣ ವ್ಯಾಜ್ಯಗಳನ್ನೆಲ್ಲಾ ತಾವೇ ತೀರಿಸಲಿ. ಆಗ ನಿನಗೆ ಸುಲಭವಾಗುವುದು. ಅವರೂ ನಿನ್ನ ಸಂಗಡ ಭಾರವನ್ನು ಹೊರುವರು. 23 ಈ ಕಾರ್ಯವನ್ನು ಮಾಡುವುದಕ್ಕೆ ದೇವರು ನಿನಗೆ ಅಪ್ಪಣೆ ಕೊಟ್ಟರೆ, ಆಗ ನೀನು ಇದನ್ನು ನಿರ್ವಹಿಸಲು ಶಕ್ತನಾಗುವೆ. ಈ ಜನರೆಲ್ಲರೂ ತಮ್ಮ ತಮ್ಮ ಸ್ಥಳಗಳಿಗೆ ಸಮಾಧಾನದಿಂದ ಹೋಗುವರು," ಎಂದನು.