23 ಆಗ ಅಬ್ರಹಾಮನು ಹತ್ತಿರ ಬಂದು, "ದುಷ್ಟರ ಜೊತೆ ನೀತಿವಂತರನ್ನೂ ನಾಶಮಾಡುವಿರೋ? 24 ಒಂದು ವೇಳೆ ಆ ಪಟ್ಟಣದಲ್ಲಿ ಐವತ್ತು ಮಂದಿ ನೀತಿವಂತರಿದ್ದರೆ, ಅದರೊಳಗಿರುವ ಆ ಐವತ್ತು ನೀತಿವಂತರಿಗೋಸ್ಕರ ಆ ಸ್ಥಳವನ್ನು ಉಳಿಸದೆ ನಾಶಮಾಡುವಿರೋ? 25 ಈ ರೀತಿಯಾಗಿ ನೀತಿವಂತರಿಗೂ ದುಷ್ಟರಿಗೂ ಭೇದ ಮಾಡದೆ, ನೀತಿವಂತರನ್ನು ದುಷ್ಟರ ಸಂಗಡ ಕೊಲ್ಲುವುದು ನಿಮ್ಮಿಂದ ಎಂದಿಗೂ ಆಗಬಾರದು. ಭೂಲೋಕಕ್ಕೆಲ್ಲಾ ನ್ಯಾಯಾಧಿಪತಿಯಾಗಿರುವ ತಾವು ನ್ಯಾಯವಾದದ್ದನ್ನೇ ಮಾಡಬೇಕಲ್ಲವೇ?" ಎಂದನು.
26 ಅದಕ್ಕೆ ಯೆಹೋವ ದೇವರು, "ನನಗೆ ಸೊದೋಮ್ ಪಟ್ಟಣದೊಳಗೆ ಐವತ್ತು ಮಂದಿ ನೀತಿವಂತರು ಸಿಕ್ಕಿದರೆ, ಅವರಿಗೋಸ್ಕರ ಆ ಸ್ಥಳವನ್ನೆಲ್ಲಾ ಉಳಿಸುವೆನು," ಎಂದರು.
27 ಆಗ ಅಬ್ರಹಾಮನು, "ಇಗೋ, ಮಣ್ಣೂ, ಬೂದಿಯೂ ಆಗಿರುವ ನಾನು ಯೆಹೋವ ದೇವರ ಸಂಗಡ ಮಾತನಾಡುವುದಕ್ಕೆ ಧೈರ್ಯಗೊಂಡಿದ್ದೇನೆ. 28 ಒಂದು ವೇಳೆ ಐವತ್ತು ನೀತಿವಂತರಲ್ಲಿ ಐದು ಮಂದಿ ಕಡಿಮೆ ಇದ್ದರೆ, ಆ ಐದು ಮಂದಿ ಇಲ್ಲದ್ದರಿಂದ ಪಟ್ಟಣವನ್ನು ನಾಶಮಾಡುವಿರೋ?" ಎಂದು ಕೇಳಿದನು.
ಅದಕ್ಕೆ ದೇವರು, "ನಲವತ್ತೈದು ಮಂದಿ ಅಲ್ಲಿ ಸಿಕ್ಕಿದರೆ ನಾನು ನಾಶಮಾಡುವುದಿಲ್ಲ," ಎಂದರು.
29 ಅಬ್ರಹಾಮನು ದೇವರ ಸಂಗಡ ಇನ್ನೂ ಮಾತನಾಡಿ, "ಅಲ್ಲಿ ನಲವತ್ತು ಮಂದಿ ದೊರೆತರೆ, ಏನು ಮಾಡುವಿರಿ?" ಎನ್ನಲು,
ಅದಕ್ಕೆ ದೇವರು, "ನಲವತ್ತು ಮಂದಿಗೋಸ್ಕರ ಅದನ್ನು ನಾನು ನಾಶಮಾಡುವುದಿಲ್ಲ," ಎಂದರು.
30 ಅವನು, "ಯೆಹೋವ ದೇವರಿಗೆ ಕೋಪಬಾರದೆ ಇರಲಿ, ನಾನು ಮಾತನಾಡುತ್ತೇನೆ. ಒಂದು ವೇಳೆ ಅಲ್ಲಿ ಮೂವತ್ತು ಮಂದಿ ಇದ್ದರೆ," ಎಂದಾಗ,
ದೇವರು, "ನನಗೆ ಅಲ್ಲಿ ಮೂವತ್ತು ಮಂದಿ ಸಿಕ್ಕಿದರೆ, ನಾಶಮಾಡುವುದಿಲ್ಲ," ಎಂದರು.
31 ಅವನು, "ಯೆಹೋವ ದೇವರ ಸಂಗಡ ಮಾತನಾಡುವುದಕ್ಕೆ ಬಂದಿದ್ದೇನೆ. ಒಂದು ವೇಳೆ ಇಪ್ಪತ್ತು ಮಂದಿ ಸಿಕ್ಕಿದರೆ ಏನು ಮಾಡುವಿರಿ?" ಎಂದನು.
ಅದಕ್ಕೆ ದೇವರು, "ಇಪ್ಪತ್ತು ಮಂದಿಗೋಸ್ಕರ ನಾನು ಅದನ್ನು ನಾಶಮಾಡುವುದಿಲ್ಲ," ಎಂದರು.
32 ಆಗ ಅವನು, "ಯೆಹೋವ ದೇವರೇ, ನಿಮಗೆ ಕೋಪಬಾರದೆ ಇರಲಿ. ಇನ್ನು ಒಂದೇ ಸಾರಿ ಮಾತನಾಡುತ್ತೇನೆ. ಒಂದು ವೇಳೆ ಅಲ್ಲಿ ಹತ್ತು ಮಂದಿ ಸಿಕ್ಕಿದರೆ," ಎಂದಾಗ,
ದೇವರು, "ಹತ್ತು ಮಂದಿಗೋಸ್ಕರ ನಾನು ಅದನ್ನು ನಾಶಮಾಡುವುದಿಲ್ಲ," ಎಂದರು.
33 ಯೆಹೋವ ದೇವರು ಅಬ್ರಹಾಮನ ಸಂಗಡ ಮಾತನಾಡುವುದನ್ನು ಮುಗಿಸಿದ ಕೂಡಲೆ ಹೊರಟು ಹೋದರು. ಅಬ್ರಹಾಮನು ತನ್ನ ಮನೆಗೆ ಹಿಂದಿರುಗಿದನು.