46 ಯೇಸು ತಾನು ನೀರನ್ನು ದ್ರಾಕ್ಷಾರಸವನ್ನಾಗಿ ಮಾಡಿದ ಗಲಿಲಾಯದ ಕಾನಾ ಊರಿಗೆ ತಿರುಗಿ ಬಂದರು. ಆಗ ಕಪೆರ್ನೌಮಿನಲ್ಲಿದ್ದ ಒಬ್ಬ ಅಧಿಕಾರಿಯ ಮಗನು ಅಸ್ವಸ್ಥನಾಗಿದ್ದನು. 47 ಯೇಸು ಯೂದಾಯದಿಂದ ಗಲಿಲಾಯಕ್ಕೆ ಬಂದಿರುವುದನ್ನು ಅವನು ಕೇಳಿದಾಗ ಅವರ ಬಳಿಗೆ ಹೋಗಿ, ಯೇಸು ಬಂದು ತನ್ನ ಮಗನನ್ನು ಸ್ವಸ್ಥಪಡಿಸಬೇಕೆಂದು ಬೇಡಿಕೊಂಡನು. ಏಕೆಂದರೆ ಅವನ ಮಗನು ಸಾಯುವ ಸ್ಥಿತಿಯಲ್ಲಿದ್ದನು.
48 ಯೇಸು ಅವನಿಗೆ, "ನೀವು ಸೂಚಕಕಾರ್ಯಗಳನ್ನೂ ಅದ್ಭುತಕಾರ್ಯಗಳನ್ನೂ ಕಾಣದ ಹೊರತು ನಂಬುವುದೇ ಇಲ್ಲ," ಎಂದರು.
49 ಆಗ ಆ ಅಧಿಕಾರಿಯು ಯೇಸುವಿಗೆ, "ಅಯ್ಯಾ, ನನ್ನ ಮಗನು ಸಾಯುವ ಮೊದಲೇ ಬನ್ನಿರಿ," ಎಂದನು.
50 ಯೇಸು ಅವನಿಗೆ, "ಹೋಗು, ನಿನ್ನ ಮಗನು ಬದುಕುವನು," ಎಂದರು.
ಆ ಮನುಷ್ಯನು ಯೇಸು ತನಗೆ ಹೇಳಿದ ಮಾತನ್ನು ನಂಬಿ ಹೊರಟುಹೋದನು. 51 ಹೀಗೆ ಅವನು ಇಳಿದು ಹೋಗುತ್ತಿರುವಾಗಲೇ ಸೇವಕರು ಅವನನ್ನು ಸಂಧಿಸಿ, ಅವನ ಮಗನು ಬದುಕಿರುವುದಾಗಿ ಅವನಿಗೆ ಹೇಳಿದರು. 52 ಅವನು, "ಯಾವ ಸಮಯದಲ್ಲಿ ಮಗನು ಚೇತರಿಸಿಕೊಂಡನು?" ಎಂದು ಅವರನ್ನು ವಿಚಾರಿಸಿದಾಗ ಅವರು, "ನಿನ್ನೆ ಮಧ್ಯಾಹ್ನ ಒಂದು ಗಂಟೆಗೆ ಜ್ವರವು ಬಿಟ್ಟಿತು," ಎಂದು ಸೇವಕರು ಅವನಿಗೆ ಹೇಳಿದರು.
53 ಹೀಗೆ, "ನಿನ್ನ ಮಗನು ಬದುಕುವನು" ಎಂದು ಯೇಸು ತನಗೆ ಹೇಳಿದ ಸಮಯದಯಲ್ಲಿಯೇ ಅದು ಆಯಿತೆಂದು ತಂದೆಯು ತಿಳಿದುಕೊಂಡು, ಅವನೂ ಅವನ ಮನೆಯವರೆಲ್ಲರೂ ಯೇಸುವನ್ನು ನಂಬಿದರು.
54 ಇದು ಯೇಸು ಯೂದಾಯದಿಂದ ಗಲಿಲಾಯಕ್ಕೆ ಬಂದ ಮೇಲೆ ಮಾಡಿದ ಎರಡನೆಯ ಸೂಚಕಕಾರ್ಯ.