30 ಆಗ ಯೇಸು: "ಒಬ್ಬ ಮನುಷ್ಯನು ಯೆರೂಸಲೇಮಿನಿಂದ ಯೆರಿಕೋವಿಗೆ ಪ್ರಯಾಣ ಮಾಡುತ್ತಿದ್ದಾಗ, ಕಳ್ಳರ ಕೈಗೆ ಸಿಕ್ಕಿಬಿದ್ದನು. ಅವರು ಅವನ ವಸ್ತ್ರಗಳನ್ನು ಕಿತ್ತುಕೊಂಡು, ಅವನನ್ನು ಗಾಯಮಾಡಿ, ಅರೆಜೀವ ಮಾಡಿಬಿಟ್ಟು ಹೊರಟು ಹೋದರು. 31 ಆಗ ಒಬ್ಬ ಯಾಜಕನು ಅದೇ ಮಾರ್ಗವಾಗಿ ಬಂದು ಅವನನ್ನು ಕಂಡು, ದಾರಿಯ ಬೇರೆ ಕಡೆಹೋದನು. 32 ಅದೇ ಪ್ರಕಾರ ಒಬ್ಬ ಲೇವಿಯೂ10:32 ಲೇವಿ ಅಂದರೆ ದೇವಾಲಯದ ಯಾಜಕನ ಸಹಾಯಕ ಆ ಸ್ಥಳಕ್ಕೆ ಬಂದು ಅವನನ್ನು ಕಂಡು, ದಾರಿಯ ಬೇರೆ ಕಡೆಹೋದನು. 33 ಆದರೆ ಒಬ್ಬ ಸಮಾರ್ಯದವನು, ಪ್ರಯಾಣ ಮಾಡುತ್ತಾ ಅವನಿದ್ದಲ್ಲಿಗೆ ಬಂದನು; ಅವನನ್ನು ಕಂಡು, ಕನಿಕರಪಟ್ಟು, 34 ಅವನ ಬಳಿಗೆ ಹೋಗಿ ಎಣ್ಣೆಯನ್ನೂ ದ್ರಾಕ್ಷಾರಸವನ್ನೂ ಹೊಯ್ದು, ಅವನ ಗಾಯಗಳನ್ನು ಕಟ್ಟಿ ತನ್ನ ಸ್ವಂತ ವಾಹಕಪಶುವಿನ ಮೇಲೆ ಕುಳ್ಳಿರಿಸಿ, ವಸತಿಗೃಹಕ್ಕೆ ತಂದು ಅವನನ್ನು ಆರೈಕೆ ಮಾಡಿದನು. 35 ಮರುದಿವಸ ಅವನು ಹೊರಟು ಹೋಗುತ್ತಿದ್ದಾಗ ಎರಡು ಬೆಳ್ಳಿ ನಾಣ್ಯವನ್ನು10:35 ಗ್ರೀಕ್ ಭಾಷೆಯಲ್ಲಿ ದಿನಾರಿ ತೆಗೆದು ಛತ್ರದ ಯಜಮಾನನಿಗೆ ಕೊಟ್ಟು ಅವನಿಗೆ, ‘ಇವನನ್ನು ಆರೈಕೆ ಮಾಡು, ನೀನು ಏನಾದರೂ ಹೆಚ್ಚು ವೆಚ್ಚಮಾಡಿದರೆ, ನಾನು ತಿರುಗಿ ಬರುವಾಗ ಕೊಟ್ಟು ತೀರಿಸುತ್ತೇನೆ,’ ಎಂದನು.
36 "ಈಗ ಆ ಕಳ್ಳರ ಕೈಗೆ ಸಿಕ್ಕಿಬಿದ್ದವನಿಗೆ ಈ ಮೂವರಲ್ಲಿ ಯಾರು ನೆರೆಯವನೆಂದು ನಿನಗೆ ತೋರುತ್ತದೆ?" ಎಂದು ಯೇಸು ಕೇಳಿದರು.
37 ಅದಕ್ಕೆ ನಿಯಮ ಪಂಡಿತನು, "ಯಾವನು ಅವನ ಮೇಲೆ ಕನಿಕರ ತೋರಿಸಿದನೋ ಅವನೇ ನಿನ್ನ ನೆರೆಯವನು," ಎಂದನು.
ಆಗ ಯೇಸು ಅವನಿಗೆ, "ಹೋಗು, ನೀನೂ ಅದರಂತೆಯೇ ಮಾಡು," ಎಂದು ಹೇಳಿದರು.