15 ಅನಂತರ ಯೇಸು ಜನರಿಗೆ, "ಎಚ್ಚರಿಕೆ! ನೀವು ಎಲ್ಲಾ ಲೋಭದಿಂದ ನಿಮ್ಮನ್ನು ಕಾಪಾಡಿಕೊಳ್ಳಿರಿ; ಏಕೆಂದರೆ ಜೀವನವು ಸಮೃದ್ಧಿಯಾದ ಆಸ್ತಿಗೆ ಆಧಾರವಾದದ್ದಲ್ಲ," ಎಂದರು.
16 ಅನಂತರ ಯೇಸು ಅವರಿಗೆ ಒಂದು ಸಾಮ್ಯವನ್ನು ಹೇಳಿದರು: "ಒಬ್ಬ ಐಶ್ವರ್ಯವಂತನ ಭೂಮಿಯು ಸಮೃದ್ಧಿಯಾಗಿ ಬೆಳೆ ಕೊಟ್ಟಿತು. 17 ಆಗ ಅವನು ತನ್ನೊಳಗೆ, ‘ನಾನೇನು ಮಾಡಲಿ? ನನಗಿರುವ ಬೆಳೆಯನ್ನು ಇಡುವುದಕ್ಕೆ ನನಗೆ ಸ್ಥಳವಿಲ್ಲ,’ ಎಂದು ಆಲೋಚಿಸಿ ಹೀಗೆಂದುಕೊಂಡನು,
18 "ನಾನು ಹೀಗೆ ಮಾಡುತ್ತೇನೆ, ‘ನನ್ನ ಕಣಜಗಳನ್ನು ಮುರಿದು ಹಾಕಿಸಿ ಇನ್ನೂ ದೊಡ್ಡದಾಗಿ ಕಟ್ಟಿಸುತ್ತೇನೆ, ಅಲ್ಲಿ ನನ್ನ ಎಲ್ಲಾ ದವಸಧಾನ್ಯಗಳನ್ನೂ ಸರಕುಗಳನ್ನೂ ಕೂಡಿಸಿಟ್ಟುಕೊಳ್ಳುತ್ತೇನೆ. 19 ಅಲ್ಲದೆ, ನಾನು ನನ್ನ ಪ್ರಾಣಕ್ಕೆ, "ಪ್ರಾಣವೇ ಅನೇಕ ವರ್ಷಗಳಿಗಾಗಿ ನಿನಗೆ ಬಹಳ ಸರಕು ಇಡಲಾಗಿದೆ. ವಿಶ್ರಮಿಸಿಕೋ; ತಿನ್ನು, ಕುಡಿ ಮತ್ತು ಆನಂದವಾಗಿರು ಎಂದು ಹೇಳಿಕೊಳ್ಳುತ್ತೇನೆ," ’ ಎಂದುಕೊಂಡನು.
20 "ಆದರೆ ದೇವರು ಅವನಿಗೆ, ‘ಬುದ್ಧಿಹೀನನೇ! ಈ ರಾತ್ರಿಯೇ ನಿನ್ನ ಪ್ರಾಣವು ನಿನ್ನಿಂದ ತೆಗೆದುಕೊಳ್ಳಲಾಗುವುದು. ಆಗ ನಿನಗಾಗಿ ಸಿದ್ಧಮಾಡಿಟ್ಟಿರುವುದೆಲ್ಲ ಯಾರ ಪಾಲಾಗುವುದು?’ ಎಂದು ಹೇಳಿದರು.
21 "ತನಗೋಸ್ಕರ ಸಂಪತ್ತನ್ನು ಕೂಡಿಸಿಟ್ಟುಕೊಂಡು ದೇವರ ವಿಷಯಗಳಲ್ಲಿ ಐಶ್ವರ್ಯವಂತ ಆಗದಿರುವವನು ಇವನಂತೆಯೇ ಇರುವನು," ಎಂದರು.