ಯೆರೂಸಲೇಮಿನ ಜಯ ಪ್ರವೇಶ
28 ಯೇಸು ಹೀಗೆ ಹೇಳಿದ ತರುವಾಯ, ಶಿಷ್ಯರಿಗೆ ಮುಂದಾಗಿ, ಯೆರೂಸಲೇಮಿಗೆ ಹೊರಟರು. 29 ಇದಾದ ಮೇಲೆ ಅವರು ಓಲಿವ್ ಗುಡ್ಡದ ಕಡೆಗೆ ಇರುವ ಬೇತ್ಫಗೆಗೂ ಬೇಥಾನ್ಯಕ್ಕೂ ಸಮೀಪಿಸಿದಾಗ, ತಮ್ಮ ಶಿಷ್ಯರಲ್ಲಿ ಇಬ್ಬರನ್ನು ಕರೆದು, 30 "ನಿಮ್ಮ ಎದುರಿಗಿರುವ ಹಳ್ಳಿಗೆ ಹೋಗಿರಿ, ನೀವು ಅದರೊಳಗೆ ಪ್ರವೇಶಿಸುತ್ತಿರುವಾಗ, ಅಲ್ಲಿ ಕಟ್ಟಿರುವ ಮತ್ತು ಯಾರೂ ಅದರ ಮೇಲೆ ಸವಾರಿ ಮಾಡದಿರುವ ಒಂದು ಕತ್ತೆಮರಿಯನ್ನು ಅಲ್ಲಿ ಕಾಣುವಿರಿ. ಅದನ್ನು ಬಿಚ್ಚಿ ಇಲ್ಲಿಗೆ ತೆಗೆದುಕೊಂಡು ಬನ್ನಿರಿ. 31 ಯಾರಾದರೂ ನಿಮಗೆ, ‘ಏಕೆ ಅದನ್ನು ಬಿಚ್ಚುತ್ತೀರಿ?’ ಎಂದು ಕೇಳಿದರೆ, ನೀವು ಅವರಿಗೆ, ‘ಇದು ಕರ್ತದೇವರಿಗೆ ಬೇಕಾಗಿದೆ,’ ಎಂದು ಹೇಳಿರಿ," ಎಂದರು.
32 ಆ ಶಿಷ್ಯರಿಬ್ಬರೂ ತಮ್ಮ ಮಾರ್ಗವಾಗಿ ಹೊರಟುಹೋಗಿ ಯೇಸು ತಮಗೆ ಹೇಳಿದಂತೆಯೇ ಕಂಡರು. 33 ಅವರು ಆ ಕತ್ತೆಮರಿಯನ್ನು ಬಿಚ್ಚುತ್ತಿರುವಾಗ, ಅದರ ಯಜಮಾನರು ಅವರಿಗೆ, "ನೀವು ಕತ್ತೆಮರಿಯನ್ನು ಯಾಕೆ ಬಿಚ್ಚುತ್ತೀರಿ?" ಎಂದು ಕೇಳಿದ್ದಕ್ಕೆ,
34 ಅವರು, "ಇದು ಕರ್ತದೇವರಿಗೆ ಬೇಕಾಗಿದೆ," ಎಂದರು.
35 ಶಿಷ್ಯರು ಅದನ್ನು ಯೇಸುವಿನ ಬಳಿಗೆ ತಂದು, ತಮ್ಮ ಬಟ್ಟೆಗಳನ್ನು ಕತ್ತೆಮರಿಯ ಮೇಲೆ ಹಾಕಿ, ಅದರ ಮೇಲೆ ಯೇಸುವನ್ನು ಕೂರಿಸಿದರು. 36 ಯೇಸು ಹೋಗುತ್ತಿರುವಾಗ, ಜನರು ತಮ್ಮ ಬಟ್ಟೆಗಳನ್ನು ದಾರಿಯಲ್ಲಿ ಹಾಸಿದರು.
37 ಇದಲ್ಲದೆ ಯೇಸು ಓಲಿವ್ ಗುಡ್ಡದಿಂದ ಇಳಿಜಾರನ್ನು ಸಮೀಪಿಸಿದಾಗ ಶಿಷ್ಯ ಸಮೂಹವೆಲ್ಲಾ ತಾವು ಕಂಡ ಎಲ್ಲ ಮಹತ್ಕಾರ್ಯಗಳಿಗಾಗಿ ಸಂತೋಷಪಡುತ್ತಾ, ಮಹಾ ಸ್ವರದಿಂದ ದೇವರನ್ನು ಹೀಗೆ ಕೊಂಡಾಡಲಾರಂಭಿಸಿದರು:
38 "ಕರ್ತದೇವರ ಹೆಸರಿನಲ್ಲಿ ಬರುವ ಅರಸನು ಆಶೀರ್ವಾದ ಹೊಂದಲಿ!"
"ಪರಲೋಕದಲ್ಲಿ ಸಮಾಧಾನ, ಅತ್ಯುನ್ನತದಲ್ಲಿ ಮಹಿಮೆ!"19:38 ಕೀರ್ತನೆ 118:26
39 ಜನಸಮೂಹದಲ್ಲಿದ್ದ ಕೆಲವು ಫರಿಸಾಯರು ಯೇಸುವಿಗೆ, "ಬೋಧಕರೇ, ನಿಮ್ಮ ಶಿಷ್ಯರನ್ನು ಗದರಿಸಿ!" ಎಂದರು.
40 ಆಗ ಯೇಸು ಅವರಿಗೆ, "ಇವರು ಸುಮ್ಮನಾದರೆ, ಈ ಕಲ್ಲುಗಳು ಕೂಗುವವು ಎಂದು ನಾನು ನಿಮಗೆ ಹೇಳುತ್ತೇನೆ," ಎಂದರು.