33 ಅವರು "ತಲೆಬುರುಡೆಯ ಸ್ಥಳ" ಎಂದು ಕರೆಯಲಾಗುವ ಸ್ಥಳಕ್ಕೆ ಬಂದಾಗ, ಅಲ್ಲಿ ಯೇಸುವನ್ನು ಶಿಲುಬೆಗೆ ಹಾಕಿದರು. ಆ ಅಪರಾಧಿಗಳಲ್ಲಿ ಒಬ್ಬನನ್ನು ಯೇಸುವಿನ ಬಲಗಡೆಯಲ್ಲಿ ಮತ್ತೊಬ್ಬನನ್ನು ಅವರ ಎಡಗಡೆಯಲ್ಲಿ ಶಿಲುಬೆಗೆ ಹಾಕಿದರು. 34 ಆಗ ಯೇಸು, "ತಂದೆಯೇ, ಇವರನ್ನು ಕ್ಷಮಿಸಿ, ತಾವು ಏನು ಮಾಡುತ್ತಿದ್ದಾರೆಂದು ಅರಿಯರು," ಎಂದರು. ಸೈನಿಕರಾದರೋ ಯೇಸುವಿನ ಉಡುಪನ್ನು ಚೀಟುಹಾಕಿ, ಹಂಚಿಕೊಂಡರು.
35 ಜನರು ನೋಡುತ್ತಾ ನಿಂತುಕೊಂಡಿದ್ದರು. ಅವರೊಂದಿಗೆ ಅಧಿಕಾರಿಗಳು ಸಹ ಯೇಸುವನ್ನು ಅಪಹಾಸ್ಯಮಾಡಿ, "ಬೇರೆಯವರನ್ನು ರಕ್ಷಿಸಿದ ಈತನು ದೇವರು ಆರಿಸಿಕೊಂಡ ಕ್ರಿಸ್ತನಾಗಿದ್ದರೆ, ತನ್ನನ್ನು ತಾನೇ ರಕ್ಷಿಸಿಕೊಳ್ಳಲಿ," ಎಂದರು.
36 ಸೈನಿಕರು ಸಹ ಯೇಸುವಿನ ಬಳಿಗೆ ಬಂದು ಅವರನ್ನು ಹಾಸ್ಯಮಾಡಿ ಯೇಸುವಿಗೆ ಹುಳಿರಸವನ್ನು ಕೊಟ್ಟು, 37 "ನೀನು ಯೆಹೂದ್ಯರ ಅರಸನಾಗಿದ್ದರೆ ನಿನ್ನನ್ನು ನೀನೇ ರಕ್ಷಿಸಿಕೋ," ಎಂದರು.
38 ಯೇಸುವಿನ ಶಿಲುಬೆಯ ಮೇಲ್ಗಡೆಯಲ್ಲಿ ಒಂದು ಲಿಖಿತ ಹೀಗಿತ್ತು:
ಈತನು ಯೆಹೂದ್ಯರ ಅರಸನು.
39 ಶಿಲುಬೆಗೆ ಹಾಕಿದ್ದ ಅಪರಾಧಿಗಳಲ್ಲಿ ಒಬ್ಬನು, "ನೀನು ಕ್ರಿಸ್ತನಾಗಿದ್ದರೆ ನಿನ್ನನ್ನು ರಕ್ಷಿಸಿಕೊಂಡು, ನಮ್ಮನ್ನೂ ರಕ್ಷಿಸು," ಎಂದು ಯೇಸುವನ್ನು ದೂಷಿಸಿದನು.
40 ಆದರೆ ಮತ್ತೊಬ್ಬ ಅಫರಾಧಿಯು ಅವನನ್ನು ಖಂಡಿಸುತ್ತಾ, "ನೀನು ಇದೇ ದಂಡನೆಗೆ ಗುರಿಯಾಗಿದ್ದರೂ ದೇವರಿಗೆ ಭಯಪಡುವುದಿಲ್ಲವೋ? 41 ನಮಗಾದರೋ ನಮ್ಮ ಕೃತ್ಯಕ್ಕೆ ತಕ್ಕ ಶಿಕ್ಷೆ ನ್ಯಾಯವಾಗಿ ಸಿಕ್ಕಿದೆ. ಈತನಾದರೋ ತಪ್ಪಾದದ್ದೇನೂ ಮಾಡಲಿಲ್ಲ," ಎಂದನು.
42 ಬಳಿಕ ಅವನು, "ಯೇಸುವೇ, ನೀವು ನಿಮ್ಮ ರಾಜ್ಯದಲ್ಲಿ ಬರುವಾಗ ನನ್ನನ್ನು ನೆನಪುಮಾಡಿಕೊಳ್ಳಿರಿ," ಎಂದನು.
43 ಆಗ ಯೇಸು ಅವನಿಗೆ, "ಈ ದಿನವೇ ನೀನು ನನ್ನ ಸಂಗಡ ಪರದೈಸಿನಲ್ಲಿರುವೆ23:43 ಪರದೈಸ ಅಂದರೆ ಆನಂದದ ಪರಮ ಸ್ಥಳ ಎಂದು ನಾನು ನಿನಗೆ ಸತ್ಯವಾಗಿ ಹೇಳುತ್ತೇನೆ," ಎಂದರು.