ಕುರುಡ ಬಾರ್ತಿಮಾಯನಿಗೆ ದೃಷ್ಟಿ ಬಂದದ್ದು
46 ತರುವಾಯ ಅವರು ಯೆರಿಕೋವಿಗೆ ಬಂದರು. ಯೇಸು ತಮ್ಮ ಶಿಷ್ಯರೊಡನೆಯೂ ಅಸಂಖ್ಯಾತ ಜನರೊಡನೆಯೂ ಯೆರಿಕೋವಿನಿಂದ ಹೊರಟಾಗ ತಿಮಾಯನ ಮಗ ಕುರುಡ ಬಾರ್ತಿಮಾಯನು ದಾರಿಯಲ್ಲಿ ಕುಳಿತುಕೊಂಡು ಭಿಕ್ಷೆಬೇಡುತ್ತಿದ್ದನು. 47 ನಜರೇತಿನ ಯೇಸು ಬರುತ್ತಿದ್ದಾರೆ ಎಂದು ಅವನು ಕೇಳಿದಾಗ, "ಯೇಸುವೇ, ದಾವೀದನ ಪುತ್ರನೇ, ನನ್ನನ್ನು ಕರುಣಿಸು," ಎಂದು ಕೂಗಿಕೊಳ್ಳಲಾರಂಭಿಸಿದನು.
48 ಸುಮ್ಮನಿರುವಂತೆ ಅನೇಕರು ಅವನಿಗೆ ಒತ್ತಾಯಪಡಿಸಿ ಹೇಳಿದರು. ಆದರೆ ಅವನು ಇನ್ನೂ ಗಟ್ಟಿಯಾಗಿ, "ದಾವೀದನ ಪುತ್ರನೇ, ನನ್ನನ್ನು ಕರುಣಿಸು," ಎಂದು ಇನ್ನಷ್ಟು ಕೂಗಿದನು.
49 ಯೇಸು ನಿಂತು, ಅವನನ್ನು ಕರೆಯಬೇಕೆಂದು ಆಜ್ಞಾಪಿಸಲು,
ಅವರು ಆ ಕುರುಡನನ್ನು ಕರೆದು, "ಧೈರ್ಯವಾಗಿರು, ಏಳು, ಯೇಸು ನಿನ್ನನ್ನು ಕರೆಯುತ್ತಿದ್ದಾರೆ," ಎಂದು ಅವನಿಗೆ ಹೇಳಿದರು. 50 ಅವನು ತನ್ನ ಮೇಲಂಗಿಯನ್ನು ತೆಗೆದುಹಾಕಿ ತಟ್ಟನೆ ಎದ್ದು ಯೇಸುವಿನ ಬಳಿಗೆ ಬಂದನು.
51 ಯೇಸು ಅವನಿಗೆ, "ನಾನು ನಿನಗೆ ಏನು ಮಾಡಬೇಕೆಂದು ನೀನು ಕೋರುತ್ತೀ?" ಎಂದು ಕೇಳಲು,
ಆ ಕುರುಡನು ಯೇಸುವಿಗೆ, "ಗುರುವೇ, ನನಗೆ ಕಣ್ಣು ಕಾಣುವಂತೆ ಮಾಡಬೇಕು," ಎಂದನು.
52 ಅದಕ್ಕೆ ಯೇಸು ಅವನಿಗೆ, "ಹೋಗು, ನಿನ್ನ ನಂಬಿಕೆಯೇ ನಿನ್ನನ್ನು ಸ್ವಸ್ಥಪಡಿಸಿದೆ," ಎಂದರು. ಕೂಡಲೇ ಅವನು ತನ್ನ ದೃಷ್ಟಿಯನ್ನು ಪಡೆದು, ದಾರಿಯಲ್ಲಿ ಯೇಸುವನ್ನು ಹಿಂಬಾಲಿಸಿದನು.