22 ಯೆರೂಸಲೇಮಿನಿಂದ ಬಂದ ನಿಯಮ ಬೋಧಕರು, "ಈತನನ್ನು ಬೆಲ್ಜೆಬೂಲನು ಹಿಡಿದಿದ್ದಾನೆ! ದೆವ್ವಗಳ ಅಧಿಪತಿಯ ಸಹಾಯದಿಂದಲೇ ಈತನು ದೆವ್ವಗಳನ್ನು ಓಡಿಸುತ್ತಾನೆ," ಎಂದರು.
23 ಆಗ ಯೇಸು ಅವರನ್ನು ಹತ್ತಿರಕ್ಕೆ ಕರೆದು ಸಾಮ್ಯರೂಪದಲ್ಲಿ ಹೇಳಿದ್ದೇನೆಂದರೆ: "ಸೈತಾನನು ಸೈತಾನನನ್ನು ಓಡಿಸುವುದು ಹೇಗೆ? 24 ಒಂದು ರಾಜ್ಯ ತನಗೆ ವಿರೋಧವಾಗಿ ವಿಭಾಗಿಸಿಕೊಂಡರೆ ಆ ರಾಜ್ಯವು ನಿಲ್ಲುವುದಿಲ್ಲ. 25 ಒಂದು ಕುಟುಂಬ ತನಗೆ ವಿರೋಧವಾಗಿ ವಿಭಾಗಿಸಿಕೊಂಡರೆ ಆ ಕುಟುಂಬವು ನಿಲ್ಲುವುದಿಲ್ಲ. 26 ಸೈತಾನನು ತನಗೆ ವಿರೋಧವಾಗಿ ತಾನೇ ಎದ್ದು ವಿಭಾಗಿಸಿಕೊಂಡರೆ, ಅವನು ನಿಲ್ಲಲಾರದೆ ನಾಶವಾಗುವನು. 27 ಒಬ್ಬನು ಬಲಿಷ್ಠನ ಮನೆಗೆ ನುಗ್ಗಿ ಮೊದಲು ಅವನನ್ನು ಕಟ್ಟಿಹಾಕದೆ ಅವನ ಸೊತ್ತನ್ನು ಸೂರೆ ಮಾಡಲಾಗುವುದಿಲ್ಲ. ಮೊದಲು ಅವನನ್ನು ಕಟ್ಟಿದ ನಂತರ ಅವನ ಮನೆಯನ್ನು ಕೊಳ್ಳೆ ಹೊಡೆಯಬಹುದು. 28 ನಾನು ನಿಮಗೆ ನಿಜವಾಗಿ ಹೇಳುವುದೇನೆಂದರೆ, ಮನುಷ್ಯರು ಮಾಡುವ ಎಲ್ಲಾ ಪಾಪಗಳಿಗೆ ಮತ್ತು ದೂಷಣೆಗಳಿಗೆ ಕ್ಷಮಾಪಣೆ ದೊರೆಯುವುದು. 29 ಆದರೆ ಪವಿತ್ರಾತ್ಮರನ್ನು ದೂಷಿಸುವವನಿಗೆ ಎಂದಿಗೂ ಕ್ಷಮಾಪಣೆ ದೊರೆಯುವುದಿಲ್ಲ. ಅವನು ನಿತ್ಯ ಪಾಪದ ಅಪರಾಧಿಯಾಗಿದ್ದಾನೆ," ಎಂದರು.
30 "ಆತನಲ್ಲಿ ಅಶುದ್ಧಾತ್ಮವಿದೆ," ಎಂದು ಅವರು ಹೇಳುತ್ತಿದ್ದುದರಿಂದ ಯೇಸು ಹೀಗೆ ಹೇಳಿದರು.