17 ಸಮೂಹದಲ್ಲಿದ್ದ ಒಬ್ಬನು, "ಬೋಧಕರೇ, ಮೂಕದೆವ್ವ ಹಿಡಿದ ನನ್ನ ಮಗನನ್ನು ನಿನ್ನ ಬಳಿಗೆ ತೆಗೆದುಕೊಂಡು ಬಂದೆನು. 18 ಅಶುದ್ಧಾತ್ಮವು ಅವನನ್ನು ಹಿಡಿದುಕೊಂಡಾಗಲೆಲ್ಲಾ ಅವನನ್ನು ಒದ್ದಾಡಿಸುತ್ತದೆ. ಅವನು ನೊರೆ ಕಾರುತ್ತಾ ತನ್ನ ಹಲ್ಲು ಕಡಿದು ಸೆಟೆದುಕೊಂಡು ಬೀಳುತ್ತಾನೆ. ಅದನ್ನು ಬಿಡಿಸಬೇಕೆಂದು ನಾನು ನಿನ್ನ ಶಿಷ್ಯರಿಗೆ ಹೇಳಿದೆನು. ಆದರೆ ಅದು ಅವರಿಂದ ಆಗಲಿಲ್ಲ," ಎಂದು ಹೇಳಿದನು.
19 ಆಗ ಯೇಸು ಅವರಿಗೆ, "ವಿಶ್ವಾಸವಿಲ್ಲದ ಸಂತಾನವೇ, ಎಷ್ಟು ಕಾಲ ನಾನು ನಿಮ್ಮೊಂದಿಗಿರಲಿ? ಎಷ್ಟು ಕಾಲ ನಾನು ನಿಮ್ಮನ್ನು ಸಹಿಸಲಿ? ಅವನನ್ನು ನನ್ನ ಬಳಿಗೆ ಕರೆದುಕೊಂಡು ಬನ್ನಿರಿ," ಎಂದು ಹೇಳಿದರು.
20 ಅವರು ಅವನನ್ನು ಯೇಸುವಿನ ಬಳಿಗೆ ತಂದರು. ಯೇಸುವನ್ನು ನೋಡಿದ ತಕ್ಷಣವೇ ಆ ದೆವ್ವವು ಆ ಬಾಲಕನನ್ನು ಒದ್ದಾಡಿಸಿದ್ದರಿಂದ ಅವನು ನೆಲಕ್ಕೆ ಬಿದ್ದು ನೊರೆ ಕಾರುತ್ತಾ ಹೊರಳಾಡಿದನು.
21 ಯೇಸು ಅವನ ತಂದೆಗೆ, "ಇದು ಇವನನ್ನು ಹಿಡಿದು ಎಷ್ಟು ಕಾಲವಾಯಿತು?" ಎಂದು ಕೇಳಲು, ಅವನು,
"ಬಾಲ್ಯದಿಂದಲೇ ಹೀಗಿದೆ. 22 ಅಶುದ್ಧಾತ್ಮವು ಅವನನ್ನು ಕೊಲ್ಲಬೇಕೆಂದು ಅನೇಕ ಸಾರಿ ಬೆಂಕಿಯೊಳಗೂ ನೀರಿನೊಳಗೂ ಹಾಕಿತು. ಆದರೆ ನೀನು ಏನಾದರೂ ಮಾಡಲು ಸಾಧ್ಯವಿದ್ದರೆ, ಕನಿಕರಿಸಿ ನಮಗೆ ಸಹಾಯಮಾಡು," ಎಂದನು.
23 ಆಗ ಯೇಸು ಅವನಿಗೆ, "ನಿನಗೆ ಸಾಧ್ಯವಿದ್ದರೆ ಎನ್ನುತ್ತೀಯಲ್ಲಾ? ನಂಬುವವನಿಗೆ ಎಲ್ಲವೂ ಸಾಧ್ಯ," ಎಂದು ಹೇಳಿದರು.
24 ತಕ್ಷಣವೇ ಬಾಲಕನ ತಂದೆಯು, "ನಾನು ನಂಬುತ್ತೇನೆ. ನನಗೆ ಅಪನಂಬಿಕೆಯಿದೆ ನನಗೆ ಸಹಾಯಮಾಡು," ಎಂದು ಮೊರೆಯಿಟ್ಟನು.
25 ಜನರು ಕೂಡಿಕೊಂಡು ಓಡಿಬರುವುದನ್ನು ಯೇಸು ಕಂಡು, ಆ ಅಶುದ್ಧಾತ್ಮವನ್ನು ಗದರಿಸಿ ಅದಕ್ಕೆ, "ಮೂಕ ಮತ್ತು ಕಿವುಡಾದ ಆತ್ಮವೇ, ನೀನು ಅವನೊಳಗಿಂದ ಹೊರಗೆ ಬಾ, ಇನ್ನೆಂದಿಗೂ ಅವನೊಳಗೆ ಸೇರಬಾರದೆಂದು ನಾನು ನಿನಗೆ ಆಜ್ಞಾಪಿಸುತ್ತೇನೆ," ಎಂದರು.
26 ಆಗ ಅಶುದ್ಧಾತ್ಮವು ಕೂಗಿ ಬಾಲಕನನ್ನು ಕ್ರೂರವಾಗಿ ಒದ್ದಾಡಿಸಿ ಅವನೊಳಗಿಂದ ಹೊರಗೆ ಬಂದಿತು. ಅವನು ಸತ್ತವನ ಹಾಗೆ ಬಿದ್ದಿದ್ದರಿಂದ ಅನೇಕರು, "ಅವನು ಸತ್ತಿದ್ದಾನೆ," ಎಂದರು. 27 ಆದರೆ ಯೇಸು ಕೈಹಿಡಿದು ಅವನನ್ನು ಮೇಲಕ್ಕೆತ್ತಲು ಅವನು ಎದ್ದು ನಿಂತನು.