24 ಯೇಸು ಮತ್ತೊಂದು ಸಾಮ್ಯವನ್ನು ಹೇಳಿದರು: "ಪರಲೋಕ ರಾಜ್ಯವು ಒಳ್ಳೆಯ ಬೀಜವನ್ನು ತನ್ನ ಹೊಲದಲ್ಲಿ ಬಿತ್ತಿದ ಒಬ್ಬ ಮನುಷ್ಯನಿಗೆ ಹೋಲಿಕೆಯಾಗಿದೆ. 25 ಆದರೆ ಜನರು ನಿದ್ರಿಸುತ್ತಿರುವಾಗ, ಅವನ ವೈರಿಯು ಬಂದು ಗೋಧಿಯ ನಡುವೆ ಕಳೆಯನ್ನು ಬಿತ್ತಿ ಹೊರಟುಹೋದನು. 26 ಗೋಧಿಯು ಮೊಳೆತು ಬೆಳೆಯುತ್ತಿರುವಾಗ, ಕಳೆ ಸಹ ಕಾಣಿಸಿಕೊಂಡಿತು.
27 "ಮನೆಯ ಯಜಮಾನನ ಸೇವಕರು ಅವನ ಬಳಿಗೆ ಬಂದು ಅವನಿಗೆ, ‘ಅಯ್ಯಾ, ನೀನು ನಿನ್ನ ಹೊಲದಲ್ಲಿ ಒಳ್ಳೆಯ ಬೀಜವನ್ನು ಬಿತ್ತಿದೆಯಲ್ಲಾ? ಆದರೆ ಈ ಕಳೆಯು ಎಲ್ಲಿಂದ ಬಂತು?’ ಎಂದು ಕೇಳಿದರು.
28 "ಯಜಮಾನನು ಅವರಿಗೆ, ‘ವೈರಿಯು ಇದನ್ನು ಮಾಡಿದ್ದಾನೆ,’ ಎಂದನು.
"ಆಗ ಸೇವಕರು ಅವನಿಗೆ, ‘ನಾವು ಹೋಗಿ ಅವುಗಳನ್ನು ಕಿತ್ತುಹಾಕೋಣವೇ?’ ಎಂದು ಕೇಳಿದರು.
29 "ಆದರೆ ಯಜಮಾನನು, ‘ಬೇಡ, ನೀವು ಕಳೆಯನ್ನು ಕೀಳುವಾಗ, ಅವುಗಳೊಂದಿಗೆ ಗೋಧಿಯನ್ನೂ ಕಿತ್ತುಬಿಟ್ಟೀರಿ. 30 ಸುಗ್ಗಿಯ ಕಾಲದವರೆಗೆ ಎರಡೂ ಜೊತೆಯಲ್ಲಿ ಬೆಳೆಯಲಿ. ಸುಗ್ಗಿಯ ಕಾಲದಲ್ಲಿ ನಾನು ಕೊಯ್ಯುವವರಿಗೆ: ಮೊದಲು ಕಳೆಯನ್ನು ಕೂಡಿಸಿ ಅವುಗಳನ್ನು ಸುಡುವುದಕ್ಕೆ ಬೇರೆ ಕಟ್ಟಿಡಿರಿ, ಗೋಧಿಯನ್ನು ನನ್ನ ಕಣಜದಲ್ಲಿ ಕೂಡಿಸಿರಿ ಎಂದು ಹೇಳುವೆನು,’ ಅಂದನು."