36 ತರುವಾಯ ಯೇಸು ಜನಸಮೂಹವನ್ನು ಕಳುಹಿಸಿಬಿಟ್ಟು ಮನೆಯೊಳಕ್ಕೆ ಹೋದರು. ಆಗ ಶಿಷ್ಯರು ಯೇಸುವಿನ ಬಳಿಗೆ ಬಂದು, "ಹೊಲದಲ್ಲಿರುವ ಕಳೆಯ ಸಾಮ್ಯವನ್ನು ನಮಗೆ ವಿವರಿಸಿರಿ," ಎಂದರು.
37 ಯೇಸು ಉತ್ತರವಾಗಿ ಅವರಿಗೆ, "ಒಳ್ಳೆಯ ಬೀಜ ಬಿತ್ತುವವನು ಮನುಷ್ಯಪುತ್ರನು. 38 ಹೊಲವು ಈ ಲೋಕ; ಒಳ್ಳೆಯ ಬೀಜವು ದೇವರ ರಾಜ್ಯದ ಮಕ್ಕಳು; ಕಳೆಯು ಕೆಡುಕನ ಮಕ್ಕಳಾಗಿದ್ದಾರೆ. 39 ಅದನ್ನು ಬಿತ್ತಿದ ವೈರಿಯು ಸೈತಾನನೇ. ಸುಗ್ಗಿಯ ಕಾಲವು ಲೋಕಾಂತ್ಯವಾಗಿದೆ. ಕೊಯ್ಯುವವರು ದೇವದೂತರೇ.
40 "ಹೇಗೆ ಕಳೆಯನ್ನು ಕಿತ್ತು ಬೆಂಕಿಯಲ್ಲಿ ಸುಡುವರೋ, ಹಾಗೆಯೇ ಈ ಲೋಕಾಂತ್ಯದಲ್ಲಿ ಆಗುವುದು. 41 ಮನುಷ್ಯಪುತ್ರನು ತನ್ನ ದೂತರನ್ನು ಕಳುಹಿಸುವನು. ಅವರು ಪಾಪಕ್ಕೆ ಆತಂಕವಾದ ಎಲ್ಲವನ್ನೂ, ಕೇಡುಮಾಡುವ ಎಲ್ಲರನ್ನೂ ಆತನ ರಾಜ್ಯದೊಳಗಿಂದ ಕೂಡಿಸಿ, 42 ದೂತರು ಅವರನ್ನು ಅಗ್ನಿಕುಂಡದಲ್ಲಿ ಹಾಕುವರು. ಅಲ್ಲಿ ಗೋಳಾಟವೂ ಹಲ್ಲು ಕಡಿಯುವಿಕೆಯೂ ಇರುವವು. 43 ಆಗ ನೀತಿವಂತರು ತಮ್ಮ ತಂದೆಯ ರಾಜ್ಯದಲ್ಲಿ ಸೂರ್ಯನಂತೆ ಪ್ರಕಾಶಿಸುವರು. ಕೇಳುವುದಕ್ಕೆ ಕಿವಿಯುಳ್ಳವರು ಕೇಳಲಿ.