1 "ಪರಲೋಕ ರಾಜ್ಯವು ತಮ್ಮ ದೀಪಗಳನ್ನು ತೆಗೆದುಕೊಂಡು ಮದುಮಗನನ್ನು ಎದುರುಗೊಳ್ಳುವುದಕ್ಕಾಗಿ ಹೊರಟುಹೋದ ಹತ್ತು ಮಂದಿ ಕನ್ಯೆಯರಿಗೆ ಹೋಲಿಕೆಯಾಗಿರುವುದು. 2 ಅವರಲ್ಲಿ ಐದು ಮಂದಿ ಬುದ್ಧಿವಂತೆಯರೂ ಐದು ಮಂದಿ ಬುದ್ಧಿಹೀನರೂ ಇದ್ದರು. 3 ಬುದ್ಧಿಹೀನರು, ತಮ್ಮ ದೀಪಗಳನ್ನು ತೆಗೆದುಕೊಂಡರು, ಆದರೆ ತಮ್ಮೊಂದಿಗೆ ಎಣ್ಣೆಯನ್ನು ತೆಗೆದುಕೊಳ್ಳಲಿಲ್ಲ. 4 ಬುದ್ಧಿವಂತೆಯರೋ, ತಮ್ಮ ದೀಪಗಳೊಂದಿಗೆ ಪಾತ್ರೆಯಲ್ಲಿ ಎಣ್ಣೆಯನ್ನೂ ತೆಗೆದುಕೊಂಡರು. 5 ಮದುಮಗನು ತಡಮಾಡಿದಾಗ ಅವರೆಲ್ಲರೂ ತೂಕಡಿಸುತ್ತಾ ನಿದ್ರೆ ಹೋದರು.
6 "ಮಧ್ಯರಾತ್ರಿಯಲ್ಲಿ, ‘ನೋಡಿರಿ, ಮದುಮಗನು ಬರುತ್ತಿದ್ದಾನೆ, ಅವನನ್ನು ಎದುರುಗೊಳ್ಳುವುದಕ್ಕಾಗಿ ಹೊರಡಿರಿ,’ ಎಂಬ ಕೂಗಾಯಿತು.
7 "ಆಗ ಆ ಕನ್ಯೆಯರೆಲ್ಲರೂ ಎದ್ದು ತಮ್ಮ ದೀಪಗಳನ್ನು ಸರಿಪಡಿಸಿಕೊಂಡರು. 8 ಬುದ್ಧಿಹೀನರು ಬುದ್ಧಿವಂತೆಯರಿಗೆ, ‘ನಿಮ್ಮ ಎಣ್ಣೆಯಲ್ಲಿ ನಮಗೂ ಕೊಂಚ ಕೊಡಿರಿ, ಏಕೆಂದರೆ ನಮ್ಮ ದೀಪಗಳು ಆರಿಹೋಗುತ್ತವೆ,’ ಎಂದರು.
9 "ಆದರೆ ಬುದ್ಧಿವಂತೆಯರು ಉತ್ತರವಾಗಿ, ‘ಹಾಗಲ್ಲ, ಅದು ನಮಗೂ ಸಾಲದೆ ಹೋದೀತು. ಆದ್ದರಿಂದ ನೀವು ಮಾರುವವರ ಬಳಿಗೆ ಹೋಗಿ ನಿಮಗೋಸ್ಕರ ಕೊಂಡುಕೊಳ್ಳಿರಿ,’ ಎಂದರು.
10 "ಅವರು ಕೊಂಡುಕೊಳ್ಳುವುದಕ್ಕೆ ಹೋದಾಗ, ಮದುಮಗನು ಬಂದನು. ಆಗ ಸಿದ್ಧವಾಗಿದ್ದವರು ಆತನೊಂದಿಗೆ ಮದುವೆಯ ಔತಣಕ್ಕೆ ಒಳಗೆ ಹೋದರು. ತರುವಾಯ ಬಾಗಿಲು ಮುಚ್ಚಲಾಯಿತು.
11 "ಇದಾದ ಮೇಲೆ ಆ ಬೇರೆ ಕನ್ಯೆಯರು ಸಹ ಬಂದು, ‘ಕರ್ತನೇ, ಕರ್ತನೇ, ನಮಗೆ ಬಾಗಿಲನ್ನು ತೆರೆಯಿರಿ,’ ಎಂದರು.
12 "ಆದರೆ ಆತನು ಉತ್ತರವಾಗಿ, ‘ನಾನು ನಿಮ್ಮನ್ನು ಅರಿಯೆನು ಎಂದು ನಿಮಗೆ ನಿಜವಾಗಿ ಹೇಳುತ್ತೇನೆ,’ ಎಂದನು.
13 "ಆದ್ದರಿಂದ ಎಚ್ಚರವಾಗಿರಿ, ಏಕೆಂದರೆ ಮನುಷ್ಯಪುತ್ರನಾದ ನನ್ನ ಬರುವ ದಿನವನ್ನಾಗಲಿ ಗಳಿಗೆಯನ್ನಾಗಲಿ ನೀವು ಅರಿಯದವರಾಗಿದ್ದೀರಿ, ಎಂದರು.