ಅಧಿಕಾರಿಗಳಿಗೆ ಅಧೀನನಾಗಿರುವುದು
1 ಪ್ರತಿಯೊಬ್ಬನೂ ಮೇಲಧಿಕಾರಿಗಳಿಗೆ ಅಧೀನನಾಗಿರಬೇಕು, ಏಕೆಂದರೆ ದೇವರು ನೇಮಿಸಿದ ಅಧಿಕಾರದ ಹೊರತು ಬೇರೆ ಯಾವದೂ ಇರುವುದಿಲ್ಲ. ಇರುವ ಅಧಿಕಾರಗಳು ದೇವರಿಂದಲೇ ನೇಮಕಗೊಂಡಿವೆ. 2 ಆದ್ದರಿಂದ ಅಧಿಕಾರಕ್ಕೆ ಎದುರು ಬೀಳುವವನು ದೇವರ ನೇಮಕವನ್ನು ಎದುರಿಸುವವನಾಗಿರುತ್ತಾನೆ. ಹಾಗೆ ಎದುರಿಸುವವರು ತೀರ್ಪಿಗೆ ಗುರಿಯಾಗುವರು. 3 ಕೆಟ್ಟದ್ದನ್ನು ಮಾಡುವವನಿಗೆ ಅಧಿಪತಿಗಳ ಭಯವಿರುವುದೇ ಹೊರತು, ಒಳ್ಳೆಯದನ್ನು ಮಾಡುವವನಿಗೆ ಅಲ್ಲ. ಅಧಿಕಾರಿಗಳಿಗೆ ಭಯಪಡಬಾರದೇ? ಒಳ್ಳೆಯದನ್ನು ಮಾಡು. ಅದರಿಂದ ನಿನಗೆ ಪ್ರಶಂಸೆ ದೊರಕುವುದು. 4 ಏಕೆಂದರೆ, ಅವನು ನಿನಗೆ ಒಳ್ಳೆಯದನ್ನು ಮಾಡುವುದಕ್ಕೋಸ್ಕರ ಇರುವ ದೇವರ ಸೇವಕನಾಗಿರುತ್ತಾನೆ. ಆದರೆ ನೀನು ಕೆಟ್ಟದ್ದನ್ನು ಮಾಡುವವನಾಗಿದ್ದರೆ ಭಯಪಡಬೇಕು. ಏಕೆಂದರೆ ಅವನು ವ್ಯರ್ಥವಾಗಿ ಅಧಿಕಾರವನ್ನು ಪಡೆದಿಲ್ಲ. ಅವನು ದೇವರ ಸೇವಕನಾಗಿದ್ದು ಕೆಟ್ಟದ್ದನ್ನು ಅಭ್ಯಾಸ ಮಾಡುವವನಿಗೆ ದಂಡನೆಯನ್ನು ವಿಧಿಸುತ್ತಾನೆ. 5 ಆದ್ದರಿಂದ, ಭಯದ ನಿಮಿತ್ತದಿಂದ ಮಾತ್ರವಲ್ಲ ಮನಸ್ಸಾಕ್ಷಿಯ ನಿಮಿತ್ತವೂ ಅಧಿಕಾರಿಗಳಿಗೆ ಅಧೀನನಾಗಿರುವುದು ಅಗತ್ಯವಾಗಿರುತ್ತದೆ.
6 ಇದರ ನಿಮಿತ್ತವಾಗಿಯೇ ನೀವು ತೆರಿಗೆಯನ್ನು ಪಾವತಿ ಮಾಡುತ್ತೀರಿ. ಏಕೆಂದರೆ, ಅಧಿಕಾರಿಗಳು ಇದರಲ್ಲಿಯೇ ನಿರತರಾಗಿರುವ ದೇವರ ಸೇವಕರಾಗಿರುತ್ತಾರೆ. 7 ನೀವು ಯಾರಿಗೆ ಏನು ಸಲ್ಲಿಸಬೇಕೋ ಅದನ್ನು ಸಲ್ಲಿಸಿರಿ. ತೆರಿಗೆ ಕಟ್ಟಬೇಕಾಗಿದ್ದರೆ ತೆರಿಗೆಯನ್ನು, ಸುಂಕ ಕೊಡಬೇಕಾಗಿದ್ದರೆ ಸುಂಕವನ್ನು, ಯಾರಿಗೆ ಮರ್ಯಾದೆಯೋ ಅವರಿಗೆ ಮರ್ಯಾದೆಯನ್ನು, ಗೌರವ ಸಲ್ಲಿಸಬೇಕಾಗಿದ್ದರೆ ಗೌರವವನ್ನು ಸಲ್ಲಿಸಿರಿ.