11 ಆದರೆ ದಾವೀದನನ್ನು ಕಾದುಕೊಂಡಿದ್ದು, ಉದಯದಲ್ಲಿ ಅವನನ್ನು ಕೊಂದುಹಾಕುವ ಹಾಗೆ ಸೌಲನು ಅವನ ಮನೆಗೆ ದೂತರನ್ನು ಕಳುಹಿಸಿದನು. ಆಗ ಅವನ ಹೆಂಡತಿಯಾದ ಮೀಕಲಳು ಅವನಿಗೆ, "ನೀನು ಈ ರಾತ್ರಿಯಲ್ಲಿ ನಿನ್ನ ಪ್ರಾಣವನ್ನು ತಪ್ಪಿಸಿಕೊಳ್ಳದೆ ಹೋದರೆ, ನಾಳೆ ಹತನಾಗುವಿ," ಎಂದು ಹೇಳಿ 12 ದಾವೀದನನ್ನು ಕಿಟಿಕಿಯ ಮಾರ್ಗವಾಗಿ ಇಳಿಸಿಬಿಡಲು ಅವನು ತಪ್ಪಿಸಿಕೊಂಡು ಓಡಿಹೋದನು. 13 ತರುವಾಯ ಮೀಕಲಳು ಒಂದು ವಿಗ್ರಹವನ್ನು ತೆಗೆದುಕೊಂಡು, ಮಂಚದ ಮೇಲೆ ಮಲಗಿಸಿ, ಅದರ ತಲೆ ಭಾಗದಲ್ಲಿ ಒಂದು ಹೋತದ ಉಣ್ಣೆಯ ತಲೆದಿಂಬನ್ನು ಹಾಕಿ, ಅದನ್ನು ವಸ್ತ್ರದಿಂದ ಮುಚ್ಚಿದಳು.
14 ಸೌಲನು ದಾವೀದನನ್ನು ಹಿಡಿದುಕೊಂಡು ಬರಲು ದೂತರನ್ನು ಕಳುಹಿಸಿದಾಗ, ಮೀಕಲಳು ಅವರಿಗೆ, "ಅವನು ಖಾಯಿಲೆಯಲ್ಲಿದ್ದಾನೆ," ಎಂದಳು.
15 ತಿರುಗಿ ಸೌಲನು ದಾವೀದನನ್ನು ನೋಡುವುದಕ್ಕೋಸ್ಕರ ದೂತರನ್ನು ಕಳುಹಿಸಿ, "ಅವನನ್ನು ನಾನು ಕೊಂದುಹಾಕುವ ಹಾಗೆ ನೀವು ಮಂಚದ ಸಂಗಡ ಅವನನ್ನು ನನ್ನ ಬಳಿಗೆ ತೆಗೆದುಕೊಂಡು ಬನ್ನಿರಿ," ಎಂದನು. 16 ಹಾಗೆಯೇ ಸೇವಕರು ಬಂದು ಕಂಡಾಗ, ವಿಗ್ರಹವು ಮಂಚದ ಮೇಲೆ ಇತ್ತು. ಅದರ ತಲೆಗೆ ಒಂದು ಆಡಿನ ಉಣ್ಣೆಯ ತಲೆದಿಂಬು ಇತ್ತು.
17 ಆಗ ಸೌಲನು ಮೀಕಲಳಿಗೆ, "ನೀನು ಈ ಪ್ರಕಾರ ನನಗೆ ಮೋಸಮಾಡಿ, ನನ್ನ ಶತ್ರುವನ್ನು ಕಳುಹಿಸಿದ್ದೇನು? ಅವನು ತಪ್ಪಿಸಿಕೊಂಡನಲ್ಲಾ," ಎಂದನು.
ಆಗ ಮೀಕಲಳು ಸೌಲನಿಗೆ ಉತ್ತರವಾಗಿ, "ಅವನು ನನಗೆ, ‘ನಾನು ನಿನ್ನನ್ನು ಕೊಂದು ಹಾಕುವುದು ಏಕೆ? ನನ್ನನ್ನು ಹೋಗಗೊಡಿಸು,’ ಎಂದು ಹೇಳಿದನು," ಎಂದಳು.
18 ಹೀಗೆಯೇ ದಾವೀದನು ಓಡಿಹೋಗಿ ತಪ್ಪಿಸಿಕೊಂಡು ರಾಮದಲ್ಲಿರುವ ಸಮುಯೇಲನ ಬಳಿಗೆ ಬಂದು, ಸೌಲನು ತನಗೆ ಮಾಡಿದ್ದನ್ನೆಲ್ಲಾ ಅವನಿಗೆ ತಿಳಿಸಿದನು. ಅವನೂ ಸಮುಯೇಲನೂ ಹೋಗಿ ನಯೋತಿನಲ್ಲಿ ವಾಸವಾಗಿದ್ದರು.