1 ಜನರಲ್ಲಿ ಸೇರದವನು ಸ್ವೇಚ್ಛಾನುಸಾರ ನಡೆಯುತ್ತಾ
ಸಮಸ್ತ ಸುಜ್ಞಾನಕ್ಕೂ ರೇಗುವನು.
2 ವಿವೇಕದಲ್ಲಿ ಬುದ್ಧಿಹೀನನಿಗೆ ಸಂತೋಷವಿಲ್ಲ;
ಆದರೆ ತನ್ನ ಹೃದಯವನ್ನು ಹೊರಪಡಿಸಿಕೊಳ್ಳುವುದೇ ಅವನಿಗೆ ಸಂತೋಷ.
3 ದುಷ್ಟತ್ವವು ಬಂದಾಗ ತಾತ್ಸಾರವೂ,
ಅವಮಾನದೊಂದಿಗೆ ನಿಂದೆಯೂ ಬರುತ್ತವೆ.
4 ಮನುಷ್ಯನ ಬಾಯಿಯ ಮಾತುಗಳು ಆಳವಾದ ನೀರಿನಂತೆಯೂ,
ಜ್ಞಾನದ ಬುಗ್ಗೆಯು ಹರಿಯುವ ತೊರೆಯಂತೆಯೂ ಇವೆ.
5 ನ್ಯಾಯತೀರ್ಪಿನಲ್ಲಿ ನೀತಿವಂತರನ್ನು ಕೆಡವುವಂತೆ,
ದುಷ್ಟರಿಗೆ ಪಕ್ಷಪಾತ ತೋರಿಸುವುದು ಯುಕ್ತವಲ್ಲ.
6 ಜ್ಞಾನಹೀನನ ತುಟಿಗಳು ಕಲಹದಲ್ಲಿ ಸೇರುವುದರಿಂದ
ಏಟುಗಳನ್ನು ತಿನ್ನುವುದಕ್ಕೆ ಅವನ ಬಾಯಿಯು ಕೂಗಿಕೊಳ್ಳುತ್ತದೆ.
7 ಬುದ್ಧಿಹೀನನ ಬಾಯಿಯು ಅವನ ನಾಶನ;
ಅವನ ತುಟಿಗಳು ಅವನ ಪ್ರಾಣಕ್ಕೆ ಪಾಶ.
8 ಚಾಡಿಕೋರನ ಮಾತುಗಳು ರುಚಿಕರವಾದ ತುತ್ತುಗಳು;
ಅವು ಹೊಟ್ಟೆಯ ಒಳಭಾಗಗಳಿಗೆ ಇಳಿದು ಹೋಗುವುವು.
9 ತನ್ನ ಕೆಲಸದಲ್ಲಿ ಸೋಮಾರಿಯಾಗಿರುವವನು,
ಕೆಡುಕನಿಗೆ ಸಹೋದರನಾಗಿದ್ದಾನೆ.
10 ಯೆಹೋವ ದೇವರ ನಾಮವು ಬಲವಾದ ಬುರುಜು;
ನೀತಿವಂತನು ಅದರೊಳಕ್ಕೆ ಓಡಿ ಭದ್ರವಾಗಿರುತ್ತಾನೆ.
11 ಧನವಂತರ ಸಂಪತ್ತು ಅವರಿಗೆ ಬಲವಾದ ಪಟ್ಟಣವೂ
ಅವನ ಕಲ್ಪನೆಯಲ್ಲಿ ಅದು ಸುರಕ್ಷತೆಯ ಎತ್ತರವಾದ ಗೋಡೆಯೂ ಆಗಿದೆ.
12 ನಾಶನಕ್ಕೆ ಮುಂಚೆ ಮನುಷ್ಯನ ಹೃದಯವು ಗರ್ವಿಷ್ಠವಾಗಿರುವುದು;
ಸನ್ಮಾನಕ್ಕೆ ಮುಂಚೆ ದೀನತ್ವವು ಬರುತ್ತದೆ.
13 ಕೇಳಿಸಿಕೊಳ್ಳದೆ ಉತ್ತರ ಕೊಡುವವರಿಗೆ
ಅದು ಮೂರ್ಖತನವೂ, ಅವಮಾನವೂ ಆಗಿದೆ.
14 ಮನುಷ್ಯನ ಆತ್ಮವು ಅಸ್ವಸ್ಥತೆಯನ್ನು ಸಹಿಸುವುದು;
ಆದರೆ ಮುರಿದ ಆತ್ಮವನ್ನು ಸಹಿಸುವವರು ಯಾರು?